ನಾನಿಲ್ಲಿ ಹೇಳಲು ಹೊರ್ಟಿರೋದು ಬೆಂಗ್ಳುರಿನ ಬ್ಯುಸಿ ಜೀವನದ ಬಗ್ಗೆ ಅಲ್ಲ.. ಅದು ಎಲ್ರಿಗೂ ಗೊತ್ತಿರೋ ವಿಷ್ಯನೇ. ನಾನು ಬರೀತಾ ಇರೋದು ಈ ಕೂಲ್ ಸಿಟಿಯ ಹಾಟ್ ಬೇಸಿಗೆಯ ಬಗ್ಗೆ.. ಒಂದೈದು ವರ್ಷಗಳ ಮೊದ್ಲು ಇಲ್ಲಿನ ಹವೆ ಸಿಕ್ಕಾಪಟ್ಟೆ ಚೆನ್ನಾಗೆ ಇತ್ತು. ಆದ್ರೆ ಈ ಎರಡು ವರ್ಷದಿಂದ ಬೇಸಿಗೆ ಬಂತು ಅಂದ್ರೆ ಸಾಕು ಕಣ್ರೀ ಭಯ ಶುರು ಆಗತ್ತೆ. ಹಗಲು ಹೊರ್ಗಡೆ ಹೋಗೋದಂದ್ರೆ ಸಾಕು, ಯಾಕಪ್ಪ ಈ ಬೇಸಿಗೆ ಬಂತು ಅನ್ಸುತ್ತೆ..ಅದ್ರ ಜೊತೆ ಕುಡಿಯೋ ನೀರಿನ ಸಮಸ್ಯೆ. ಯಾಕಾದ್ರೂ ಬೇಕು ಈ ಬೆಂಗಳೂರು ಜೀವನ ಅಂತ ಅನ್ನಿಸ್ತಾಯಿದೆ..
ಹುಟ್ಟಿ ಬೆಳ್ದಿರೋದೆಲ್ಲ ಧಾರಾಕಾರ ಬೆವರು ಸುರಿಸೊ(!!) ಊರಾದ ಮಂಗ್ಳೂರಾದ್ರೂ , ಇಲ್ಲಿನ ಮೈಗಂಟುವ ಸೆಕೆ ಸಹಿಸೋದೇ ಕಷ್ಟ. ಜೊತೆಗೆ ಟ್ರಾಫಿಕ್ ಜಾಮ್ ಎಂಬ ರಾಕ್ಷಸ ಬೇರೆ. ಟ್ರಾಫಿಕ್ ಪೋಲಿಸ್ನೋರ ಪಾಡು ದೇವ್ರಿಗೇ ಪ್ರೀತಿ. ಒಂದೆಡೆ ಬಿಸಿಲು, ಮತ್ತೊಂದೆಡೆ ವಾಹನಗಳ ಹೊಗೆ, ರಸ್ತೆಗಳಿಂದ ಚಿಮ್ಮುವ ಧೂಳು. ಅದ್ರ ಜೊತೆ ಟ್ರಾಫಿಕ್ ನಿಯಮ ಉಲ್ಲಂಘಿಸೋರು. ಟ್ರಾಫಿಕ್ ಪೋಲಿಸ್ನೋರ ಸಹನೆಗೊಂದು ಹ್ಯಾಟ್ಸಾಫ್..

ನಾನು ಮೇಲೆ ಬರೆದಿರೋದು ಬೆಂಗಳೂರಿನ ಸಮಸ್ಯೆಯಾದ್ರೂ, ಇದು ಬರಿಯ ಇಲ್ಲಿನ ಸಮಸ್ಯೆಯಲ್ಲ. ದೇಶದೆಲ್ಲೆಡೆ ಬೇಸಿಗೆಯ ಬಿಸಿಲು ಎನ್ನುವುದೊಂದು ದೊಡ್ಡ ಸಮಸ್ಯೆ..ಬಿಸಿಲಿನ ಝಳ ಮಾನವ ,ಪ್ರಾಣಿ-ಪಕ್ಷಿಗಳು ಎಲ್ಲರನ್ನು ಕಾಡುತ್ತಿದೆ. ನಮ್ಮ ಪರಿಸರದ ರಕ್ಷಣೆ ನಮ್ಮದೇ ಕರ್ತವ್ಯ. ಆದಷ್ಟು ಮರಗಳನ್ನು ಕಡಿಯೋದು ಕಡಿಮೆ ಮಾಡೋಣ. ಸುತ್ತಲಿನ ಖಾಲಿ ಜಾಗಗಳಲ್ಲಿ ಗಿಡ ನೆಡೋಣ. ನಮ್ಮ ಮುಂದಿನ ಜನಾಂಗಕ್ಕೆ ಬದುಕಲು ಅಸಾಧ್ಯವೆನ್ನಿಸುವ ಪರಿಸರ ಸೃಷ್ಠಿಸದಿರೋಣ. ಈ ಕುರಿತು ನಿಮ್ಮ ಅಭಿಪ್ರಾಯಗಳೇನಾದರಿದ್ದರೆ ಕೆಳಗಿನ ಕಾಮೆಂಟ್ ಬಾಕ್ಸ್ನಲ್ಲಿ ಲೇಖಿಸಿ. ಧನ್ಯವಾದಗಳು....
No comments:
Post a Comment